ನಿಜದ ನೆಲೆಯ ಅರಿತ ಯೋಗಿ ಸಿದ್ಧರಾಮ -ಹೋರಾಟಗಾರ್ತಿ ಸೌಮ್ಯಾಗೌಡ
Posted by editor on in Category
08
49

ಬೆಂಗಳೂರು: ನಿಜದ ನೆಲೆಯ ಅರಿತು ಲೋಕಕ್ಕೆ ಉಪಕಾರಿ ಕಾರ್ಯ ಮಾಡಿ, ಅರವತ್ತೆಂಟು ಸಾವಿರ ವಚನಗಳ ಹಾಡಿ ಕನ್ನಡ ನಾಡಿನಾದ್ಯಂತ ಸಂಚರಿಸಿದ ನಿಜಯೋಗಿ ಸಿದ್ದರಾಮರು ಎಂದು ಹೋರಾಟಗಾರ್ತಿ ಕೆ.ಆರ್. ಸೌಮ್ಯಾಗೌಡ ಹೇಳಿದರು. ವಚನಜ್ಯೋತಿ ಬಳಗವು ಜ್ಞಾನಭಾರತಿ ಸೊಣ್ಣೇನಹಳ್ಳಿಯ ರಂಗಹನುಮಯ್ಯ ಬಯಲು ಮಂಟಪದಲ್ಲಿ ಆಯೋಜಿಸಿದ್ದ ವಚನ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬಸವಣ್ಣನವರ ನೇತೃತ್ವದಲ್ಲಿ ನಡೆದ ವಿಚಾರ ಕ್ರಾಂತಿಯಲ್ಲಿ ಸಿದ್ದರಾಮರು ತಮ್ಮ ಕರ್ಮಯೋಗವ ಬಿಟ್ಟು ಕೈಲಾಸವೆಂಬುದು ಹಾಳು ಬೆಟ್ಟ ಎಂದು ಹೇಳುವ ಮಟ್ಟಿಗೆ ಬೆಳಗಿದರು ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಂಟಿ ಕಾರ್ಯದರ್ಶಿ ಪಂಪನಗೌಡ ಮೇಲ್ಸೀಮೆ, ಸಂಕ್ರಾಂತಿ ವೇಳೆ ವಚನಗಳನ್ನು ಆಲಿಸುವುದು, ಸಿದ್ದರಾಮರಂತ ಶಿವಯೋಗಿಗಳ ಸ್ಮರಿಸುವಂತ ಒಳ್ಳೆಯ ಕೆಲಸ ವಚನಜ್ಯೋತಿ ಬಳಗ ಮಾಡುತ್ತಿದೆ ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ವಚನಜ್ಯೋತಿ ಬಳಗದ ಪಿನಾಕಪಾಣಿ ಮಾತನಾಡಿ, ಹಬ್ಬಗಳ ನೆಪದಲ್ಲಿ ವಚನ ಸಂಸ್ಕೃತಿಯನ್ನು ಬಳಗ ನಿರಂತರವಾಗಿ ನಡೆಸುತ್ತಿದೆ. ಹೊಸವರ್ಷದ ಸಂಕ್ರಾಂತಿಯಿಂದ ಕಾರ್ತಿಕದವರೆಗೆ ನಿರಂತರವಾಗಿ ಆಸಕ್ತ ಅಂಗಳಗಳಲ್ಲಿ ನಡೆಸುತ್ತಿದ್ದು ಕಳೆದ ವರ್ಷ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ವಚನಗಳನ್ನು ಪಸರಿಸಲಾಗಿದೆ. ತರಗತಿಗಳಲ್ಲಿ ಪಠ್ಯಕ್ರಮದಲ್ಲಿ ವಚನ ಬಿತ್ತನೆ ಮಾಡುತ್ತಿದ್ದು, ಉಚಿತ ವಚನ ತರಗತಿಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.